ಮೆಯ್ನೆ ಪ್ಯಾರಿ ಕಿಯಾ (ಅನುವಾದ: ನಾನು ಪ್ರೀತಿಸಿದೆ) ೧೯೮೯ರ ಒಂದು ಹಿಂದಿ ಸಂಗೀತಮಯ ಪ್ರಣಯಪ್ರಧಾನ ಚಲನಚಿತ್ರವಾಗಿದೆ. ಈ ಚಿತ್ರವನ್ನು ಸೂರಜ್ ಬರ್ಜಾತ್ಯಾ ನಿರ್ದೇಶಿಸಿದ್ದಾರೆ. ಇದು ಅವರ ನಿರ್ದೇಶನದ ಮೊದಲ ಚಿತ್ರವಾಗಿತ್ತು. ಜೊತೆಗೆ ಇದರ ಸಹ ಬರಹಗಾರರೂ ಆಗಿದ್ದರು. ಈ ಚಿತ್ರದಲ್ಲಿ ಸಲ್ಮಾನ್‌ ಖಾನ್‌ ತಮ್ಮ ಮೊದಲ ನಾಯಕ ಪಾತ್ರದಲ್ಲಿ ಮತ್ತು ಪ್ರಥಮ ಪ್ರವೇಶದಲ್ಲಿ ಭಾಗ್ಯಶ್ರೀ ನಟಿಸಿದ್ದಾರೆ. ಜೊತೆಗೆ ಪ್ರಮುಖ ಪಾತ್ರಗಳಲ್ಲಿ ಅಲೋಕ್ ನಾಥ್, ಮೋಹನೀಶ್ ಬೆಹೆಲ್, ರೀಮಾ ಲಾಗೂ, ರಾಜೀವ್ ವರ್ಮಾ, ಅಜೀತ್ ವಾಚ್ಛಾನಿ ಮತ್ತು ಲಕ್ಷ್ಮೀಕಾಂತ್ ಬೇರ್ಡೆ ಕೂಡ ನಟಿಸಿದ್ದಾರೆ. ಕಥೆಯು ಪ್ರೇಮ್ ಮತ್ತು ಸುಮನ್‍ರಿಗೆ ಸಂಬಂಧಿಸಿದೆ. ಸುಮನ್ ಒಬ್ಬ ಬಡ ಯಂತ್ರಕರ್ಮಿ ಕರನ್‍ನ ಮಗಳಾಗಿರುತ್ತಾಳೆ. ಅವನು ವಿದೇಶಕ್ಕೆ ಹೋಗುವ ಮುನ್ನ ಅವಳನ್ನು ತನ್ನ ಶ್ರೀಮಂತ ಗೆಳೆಯ ಕಿಶನ್‍ನ ಬಳಿ ಬಿಡುತ್ತಾನೆ. ಕಿಶನ್‍ನ ಮಗ ಪ್ರೇಮ್ ಸುಮನ್‍ನ ಸ್ನೇಹಬೆಳೆಸುತ್ತಾನೆ ಮತ್ತು ಅವರು ಒಬ್ಬರನ್ನೊಬ್ಬರು ಪ್ರೀತಿಸತೊಡಗುತ್ತಾರೆ. ಈ ಚಿತ್ರವು ೨೯ ಡಿಸೆಂಬರ್ ೧೯೮೯ರಂದು ಬಿಡುಗಡೆಯಾಯಿತು. ರಾಜ್‍ಶ್ರೀ ಪ್ರೊಡಕ್ಷನ್ಸ್ ₹೨೦ ಕೋಟಿಯಲ್ಲಿ ನಿರ್ಮಾಣಮಾಡಿದ ಮೆಯ್ನೆ ಪ್ಯಾರ್ ಕಿಯಾ ಪ್ರಮುಖ ವಿಮರ್ಶಾತ್ಮಕ ಹಾಗೂ ವಾಣಿಜ್ಯಿಕ ಯಶಸ್ಸಾಗಿ ಹೊರಹೊಮ್ಮಿತು. ಬಾಕ್ಸ್ ಆಫ಼ಿಸ್‍ನಲ್ಲಿ ಇದು ವಿಶ್ವಾದ್ಯಂತ ಸಾರ್ವಕಾಲಿಕವಾಗಿ ₹೩೦೮.೧ ಕೋಟಿಯಷ್ಟು ಹಣಗಳಿಸಿತು. ಇದು ಆ ವರ್ಷದ ಅತಿ ಹೆಚ್ಚು ಹಣಗಳಿಸಿದ ಬಾಲಿವುಡ್ ಚಲನಚಿತ್ರವಾಯಿತು. ಈ ಚಿತ್ರವು ಬಿಡುಗಡೆಯಾದ ಮೇಲೆ ವಿಮರ್ಶಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು. ಸೂರಜ್ ಬರ್ಜಾತ್ಯಾರ ನಿರ್ದೇಶನ, ಕಥೆ ಮತ್ತು ಅಭಿನಯಗಳು ವಿಮರ್ಶಾತ್ಮಕ ಪ್ರಶಂಸೆ ಪಡೆದವು. ಇಂದು ಕೂಡ ಇದನ್ನು ಅಗ್ರ ೧೦ ಅತಿ ಯಶಸ್ವಿ ಬಾಲಿವುಡ್ ಚಲನಚಿತ್ರಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ೩೫ನೇ ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಮೆಯ್ನೆ ಪ್ಯಾರ್ ಕಿಯಾ ಸೂರಜ್ ಬರ್ಜಾತ್ಯಾರಿಗೆ ಅತ್ಯುತ್ತಮ ನಿರ್ದೇಶಕ, ಭಾಗ್ಯಶ್ರೀಗೆ ಅತ್ಯುತ್ತಮ ನಟಿ, ಖಾನ್‍ರಿಗೆ ಅತ್ಯುತ್ತಮ ನಟ, ಲಾಗೂರಿಗೆ ಅತ್ಯುತ್ತಮ ಪೋಷಕ ನಟಿ ಮತ್ತು ಬೇರ್ಡೆಯವರಿಗೆ ಅತ್ಯುತ್ತಮ ಹಾಸ್ಯ ನಟ ಸೇರಿದಂತೆ ಅತಿ ಹೆಚ್ಚು ೧೨ ನಾಮನಿರ್ದೇಶನಗಳನ್ನು ಪಡೆಯಿತು. ಇದು ಲಾಂಛನಕ್ಕೆ ಅತ್ಯುತ್ತಮ ಚಲನಚಿತ್ರ, ಖಾನ್‍ರಿಗೆ ಅತ್ಯುತ್ತಮ ಚೊಚ್ಚಲ ನಟ ಮತ್ತು ಭಾಗ್ಯಶ್ರೀಗೆ ಲಕ್ಸ್ ವರ್ಷದ ಹೊಸ ಮುಖ ಪ್ರಶಸ್ತಿ ಸೇರಿದಂತೆ ಆರು ವರ್ಗಗಳಲ್ಲಿ ಜಯಿಸಿತು. ಈ ಚಿತ್ರವು ಪ್ರಭು ದೇವ ನಿರ್ದೇಶಿಸಿದ ೨೦೦೫ರ ತೆಲುಗು ಬ್ಲಾಕ್‍ಬಸ್ಟರ್ ನುವ್ವೊಸ್ತಾನಂಟೆ ನೆನೊದ್ದಂಟಾನಾ ಗೆ ಸ್ಫೂರ್ತಿ ಎಂದು ಹೇಳಲಾಗಿದೆ. ನಂತರ ಆ ಚಿತ್ರವನ್ನು ತಮಿಳು, ಹಿಂದಿ ಮತ್ತು ಕನ್ನಡ ಸೇರಿದಂತೆ ಏಳು ಇತರ ಭಾಷೆಗಳಲ್ಲಿ ರೀಮೇಕ್ ಮಾಡಲಾಯಿತು. ಸಲ್ಮಾನ್ ಖಾನ್‍ರ ಮತ್ತೊಂದು ಚಿತ್ರ ಪ್ಯಾರ್ ಕಿಯಾ ತೋ ಡರನಾ ಕ್ಯಾ ಈ ಚಿತ್ರದಿಂದ ಭಾಗಶಃ ಸ್ಫೂರ್ತಿಪಡೆದಿತ್ತು. == ಕಥಾವಸ್ತು == ಕರನ್ (ಅಲೋಕ್ ನಾಥ್) ತನ್ನ ಏಕೈಕ ಮಗಳಾದ ಸುಂದರ ಸುಮನ್‌ಳೊಂದಿಗೆ (ಭಾಗ್ಯಶ್ರಿ) ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿರುವ ಒಬ್ಬ ಬಡ ಮೆಕ್ಯಾನಿಕ್ ಆಗಿರುತ್ತಾನೆ. ಅವನು ಹೊರಹೋಗಿ ವ್ಯವಹಾರದಲ್ಲಿ ತನ್ನ ಅದೃಷ್ಟವನ್ನು ಪರೀಕ್ಷಿಸಲು ದುಬೈ‍ಗೆ ಹೋಗಿ ತನ್ನ ಮಗಳ ಮದುವೆ ಮಾಡುವಷ್ಟು ಹಣವನ್ನು ಸಂಗ್ರಹಿಸಲು ನಿರ್ಧರಿಸುತ್ತಾನೆ. ಹಾಗಾಗಿ, ತನ್ನ ಮಗಳನ್ನು ತನ್ನ ಕುಟುಂಬದ ಸ್ನೇಹಿತನಾದ ಕಿಶನ್‍ನೊಂದಿಗೆ (ರಾಜೀವ್ ವರ್ಮಾ) ಬಿಡಲು ನಿರ್ಧರಿಸುತ್ತಾನೆ. ಒಬ್ಬ ಶ್ರೀಮಂತ ಉದ್ಯಮಿಯಾದ ಕಿಶನ್, ಸುಮನ್‍ಳ ತಂದೆ ದೂರಹೋಗಿರುವಾಗ ಅವಳು ತನ್ನ ಮನೆಯಲ್ಲಿರಲು ಬಿಡುತ್ತಾನೆ ಏಕೆಂದರೆ ಅವನು ತನ್ನ ಹಳೆಯ ಸ್ನೇಹಿತನ ವಿನಂತಿಯನ್ನು ನಿರಾಕರಿಸುವಂತಿರುವುದಿಲ್ಲ. ಕಿಶನ್‍ನ ಮಗ ಪ್ರೇಮ್ (ಸಲ್ಮಾನ್ ಖಾನ್) ಸುಮನ್‍ಳ ಸ್ನೇಹಬೆಳೆಸುತ್ತಾನೆ. ಒಬ್ಬ ಹುಡುಗ ಮತ್ತು ಹುಡುಗಿ ನಿಷ್ಕಾಮ ಗೆಳೆಯರಾಗಬಲ್ಲರೆಂದು ಅವನು ಅವಳಿಗೆ ಭರವಸೆ ಕೊಡುತ್ತಾನೆ. ಕಿಶನ್‍ನ ವ್ಯವಹಾರದ ಪಾಲುದಾರನಾದ ರಂಜೀತ್‍ನ (ಅಜೀತ್ ವಾಚ್ಛಾನಿ) ಏಕೈಕ ಮಗಳಾದ ಸೀಮಾ (ಪರ್ವೀನ್ ದಸ್ತೂರ್) ಆಯೋಜಿಸಿರುವ ಪಾರ್ಟಿಗೆ ಪ್ರೇಮ್ ಸುಮನ್‍ಳನ್ನು ಕರೆದುಕೊಂಡು ಹೋಗುತ್ತಾನೆ. ರಂಜೀತ್‍ನ ಸೋದರಳಿಯನಾದ ಜೀವನ್ (ಮೋಹನೀಶ್ ಬೆಹೆಲ್) ದುರಹಂಕಾರಿ ಮತ್ತು ಗರ್ವಿಷ್ಠನಾಗಿದ್ದು (ಅವರಿಬ್ಬರೂ "ಕೇವಲ ಗೆಳೆಯರು" ಎಂದು ಸುಳ್ಳಾಗಿ ಸಾಧಿಸುತ್ತಾರೆಂದು ಆರೋಪಿಸಿ) ಸುಮನ್ ಮತ್ತು ಪ್ರೇಮ್‍ರನ್ನು ಅವಮಾನಿಸುತ್ತಾನೆ. ಇದು ಕಥೆಯಲ್ಲಿನ ಸಂಧಿಕಾಲವಾಗಿರುತ್ತದೆ. ಸುಮನ್ ಅಳುತ್ತ ಪಾರ್ಟಿಯಿಂದ ಹೊರಹೋಗಿ ಪ್ರೇಮ್‍ನಿಂದ ದೂರವಿರಲು ಆರಂಭಿಸುತ್ತಾಳೆ. ಆ ಘಟ್ಟದಲ್ಲಿ, ತಾವಿಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದೇವೆಂದು ಪ್ರೇಮ್ ಮತ್ತು ಸುಮನ್‍ರಿಗೆ ಅರಿವಾಗುತ್ತದೆ. ಪ್ರೇಮ್‍ನ ತಾಯಿ ಕೌಶಲ್ಯಾ (ರೀಮಾ ಲಾಗೂ) ಪ್ರೇಮ್ ಮತ್ತು ಸುಮನ್‍ರ ಸಂಬಂಧವನ್ನು ಆಳವಾಗಿ ತನಿಖೆಮಾಡಿ ಸುಮನ್ ತನ್ನ ಸೊಸೆಯಾಗಬಹುದೆಂದು ಅನುಮತಿಸುತ್ತಾಳೆ. ಆದರೆ ಕಿಶನ್ ಈ ಸಂಬಂಧದಿಂದ ಸಂತೋಷಗೊಳ್ಳದೆ ಅವಳು ತನ್ನ ಮನೆ ಬಿಡಬೇಕೆಂದು ಹೇಳುತ್ತಾನೆ. ಅವಳು ತನ್ನ ಆತಿಥ್ಯವನ್ನು ದುರುಪಯೋಗಪಡಿಸಿಕೊಂಡಿದ್ದಾಳೆಂದು ಅವನಿಗೆ ಅನಿಸುತ್ತದೆ. ಕರನ್ ವಿದೇಶದಿಂದ ಮರಳಿ ಕಿಶನ್‍ನ ವರ್ತನೆಯಿಂದ ಬಹಳ ಸಿಟ್ಟಾಗುತ್ತಾನೆ. ಅವನು ಪ್ರೇಮ್ ಮತ್ತು ಸುಮನ್‍ರನ್ನು ಒಟ್ಟುಗೂಡಿಸುವ ಪಿತೂರಿ ನಡೆಸಿದನೆಂದು ಕಿಶನ್ ಆರೋಪಿಸುತ್ತಾನೆ. ಕರನ್ ಮತ್ತು ಕಿಶನ್ ಜಗಳವಾಡುತ್ತಾರೆ, ಮತ್ತು ಕರನ್ ಹಾಗೂ ಸುಮನ್ ತೀವ್ರವಾಗಿ ಅವಮಾನಿತರಾಗಿ ಅಂತಿಮವಾಗಿ ತಮ್ಮ ಹಳ್ಳಿಗೆ ಮರಳುತ್ತಾರೆ. ಪ್ರೇಮ್ ಈ ಅಗಲಿಕೆಯನ್ನು ಒಪ್ಪಲು ನಿರಾಕರಿಸಿ ಸುಮನ್‍ಳ ಹಳ್ಳಿಗೆ ಹೋಗಿ ಅವಳನ್ನು ಮದುವೆಯಾಗಲು ಅನುಮತಿ ಕೇಳುತ್ತಾನೆ. ಕಿಶನ್‍ನ ಆರೋಪಗಳಿಂದ ಸಿಟ್ಟಾಗಿರುವ ಕರನ್ ತಾನು ಒಂದು ಷರತ್ತಿನ ಮೇಲೆ ಮದುವೆಗೆ ಒಪ್ಪುತ್ತೇನೆಂದು ಹೇಳುತ್ತಾನೆ: ಪ್ರೇಮ್ ತನ್ನ ಸ್ವಂತ ಪ್ರಯತ್ನದಿಂದ ತನ್ನ ಹೆಂಡತಿಗೆ ಆಧಾರವಾಗಬಲ್ಲೆ ಮತ್ತು ಪ್ರತ್ಯೇಕವಾಗಿ ಬದುಕಬಲ್ಲೆ ಎಂದು ಸಾಬೀತುಪಡಿಸಬೇಕು. ಪ್ರೇಮ್ ಒಬ್ಬ ಟ್ರಕ್ ಚಾಲಕ ಮತ್ತು ಹತ್ತಿರದ ಕಲ್ಲುಗಣಿಯಲ್ಲಿ ಕಾರ್ಮಿಕನಾಗಿ ಕೆಲಸಮಾಡಲು ಆರಂಭಿಸುತ್ತಾನೆ. ತಿಂಗಳ ಕೊನೆಯ ವೇಳೆಗೆ, ಪ್ರೇಮ್ ಬೇಕಾದ ಹಣವನ್ನು ಗಳಿಸಿರುತ್ತಾನೆ. ಕರನ್‍ನ ಮನೆಯ ದಾರಿಯಲ್ಲಿ, ಜೀವನ್ ಮತ್ತು ಘಾತುಕರ ಗುಂಪೊಂದು ಅವನ ಮೇಲೆ ಹಠಾತ್ತನೆ ದಾಳಿ ನಡೆಸಿ ಕೊಲ್ಲಲು ಪ್ರಯತ್ನಿಸುತ್ತದೆ. ಅವನು ಉಳಿಯುತ್ತಾನೆ ಆದರೆ ಜಗಳದಲ್ಲಿ ಅವನ ಕೂಲಿ ಹಾಳಾಗುತ್ತದೆ. ಕರನ್ ಒರಟಾಗಿ ಪ್ರೇಮ್‍ನ ಪ್ರಯತ್ನವನ್ನು ನಿರ್ಲಕ್ಷಿಸಿ ಘಾತುಕರ ದಾಳಿ ಬಗ್ಗೆ ಪ್ರೇಮ್‍ನ ಕಥೆಯನ್ನು ನಂಬುವುದಿಲ್ಲ. ತನ್ನನ್ನು ಸಾಬೀತುಪಡಿಸಿಕೊಳ್ಳುವುದಕ್ಕೆ ಪ್ರೇಮ್ ಮತ್ತೊಂದು ಅವಕಾಶವನ್ನು ಬೇಡಿಕೊಳ್ಳುತ್ತಾನೆ. ಅವನ ಪ್ರಾಮಾಣಿಕ ದೃಢಸಂಕಲ್ಪವು ಕರನ್‍ನ ಹೃದಯವನ್ನು ಕರಗಿಸುತ್ತದೆ ಮತ್ತು ಪ್ರೇಮ್ ತನ್ನ ಮಗಳು ಸುಮನ್‍ಳನ್ನು ಮದುವೆಯಾಗುವುದಕ್ಕೆ ಒಪ್ಪುತ್ತಾನೆ. ಈ ನಡುವೆ, ರಂಜೀತ್ (ಪ್ರೇಮ್‍ನ ತಂದೆ) ಕಿಶನ್ ಬಳಿ ಹೋಗಿ ಕರನ್ ಅವನ ಮಗನನ್ನು ಕೊಂದಿದ್ದಾನೆಂದು ಹೇಳುತ್ತಾನೆ. ಇದನ್ನು ನಂಬಲಾಗದೆ, ಇದನ್ನು ಪರೀಕ್ಷಿಸಲು ಕಿಶನ್ ಕರನ್ ಬಳಿ ಹೋಗುತ್ತಾನೆ. ಕರನ್‍ನ ಹಳ್ಳಿಗೆ ಆಗಮಿಸಿದಾಗ ಪ್ರೇಮ್ ಬದುಕಿರುವುದಾಗಿ ಗೊತ್ತಾಗುತ್ತದೆ. ಪ್ರೇಮ್ ಜೀವನ್‍ನ ಎದುರು ನಿಂತಾಗ, ರಂಜೀತ್ ಮತ್ತು ಅವನ ಬೆಂಬಲಿಗರು ಕಿಶನ್ ಮತ್ತು ಕರನ್ ಇಬ್ಬರಿಗೂ ಜೋರಾಗಿ ಹೊಡೆಯುತ್ತಾರೆ. ಜೀವನ್ ಸುಮನ್‍ಳನ್ನು ಅಪಹರಿಸುತ್ತಾನೆ. ಕೊನೆಯಲ್ಲಿ, ಪ್ರೇಮ್, ಕರನ್ ಮತ್ತು ಕಿಶನ್ ಒಟ್ಟು ಸೇರಿ ತಮ್ಮ ಸಾಮಾನ್ಯ ಶತ್ರುಗಳಾದ ರಂಜೀತ್, ಅವನ ಸೋದರಳಿಯ ಜೀವನ್ ಮತ್ತು ರಂಜೀತ್‍ನ ಬೆಂಬಲಿಗರನ್ನು ಸೋಲಿಸಿ ನಂತರ ಸುಮನ್‍ಳನ್ನು ಉಳಿಸುತ್ತಾರೆ. ಕರನ್ ಮತ್ತು ಕಿಶನ್ ನಡುವಿನ ವೈಮನಸ್ಯ ಅಂತ್ಯವಾಗಿ ಪ್ರೇಮ್ ಮತ್ತು ಸುಮನ್ ಮದುವೆಯಾಗುತ್ತಾರೆ. == ಪಾತ್ರವರ್ಗ == ಪ್ರೇಮ್ ಚೌಧರಿ ಪಾತ್ರದಲ್ಲಿ ಸಲ್ಮಾನ್ ಖಾನ್ ಸುಮನ್ ಶ್ರೇಷ್ಠಾ ಪಾತ್ರದಲ್ಲಿ ಭಾಗ್ಯಶ್ರಿ ಕಾರಾವರ್ "ಕರನ್" ಶ್ರೇಷ್ಠಾ ಪಾತ್ರದಲ್ಲಿ ಅಲೋಕ್ ನಾಥ್ ಕಿಶನ್ ಕುಮಾರ್ ಚೌಧರಿ ಪಾತ್ರದಲ್ಲಿ ರಾಜೀವ್ ವರ್ಮಾ ಕೌಶಲ್ಯಾ ಚೌಧರಿ ಪಾತ್ರದಲ್ಲಿ ರೀಮಾ ಲಾಗೂ ಮನೋಹರ್ ಪಾತ್ರದಲ್ಲಿ ಲಕ್ಷ್ಮೀಕಾಂತ್ ಬೇರ್ಡೆ ರಂಜೀತ್ ಸೆಹ್ನಿ ಪಾತ್ರದಲ್ಲಿ ಅಜೀತ್ ವಾಛಾನಿ ಸೀಮಾ ಸೆಹ್ನಿ ಪಾತ್ರದಲ್ಲಿ ಪರ್ವೀನ್ ದಸ್ತೂರ್ ಜೀವನ್ ಸೆಹ್ನಿ ಪಾತ್ರದಲ್ಲಿ ಮೋಹನೀಶ್ ಬೆಹೆಲ್ ರಾಮು ಪಾತ್ರದಲ್ಲಿ ದಿಲೀಪ್ ಜೋಶಿ ಶಂಭು ಪಾತ್ರದಲ್ಲಿ ರಾಜು ಶ್ರೀವಾಸ್ತವ ರಹೀಮ್ ಚಾಚಾ ಪಾತ್ರದಲ್ಲಿ ಹರೀಶ್ ಪಟೇಲ್ ಗುಲಾಬಿಯಾ ಪಾತ್ರದಲ್ಲಿ ಹೂಮಾ ಖಾನ್ == ತಯಾರಿಕೆ == ಈ ಚಿತ್ರದ ತಯಾರಿಕೆಯ ಮುನ್ನ, ರಾಜ್‍ಶ್ರೀ ಪ್ರೊಡಕ್ಷನ್ಸ್ ಆರ್ಥಿಕವಾಗಿ ಕಷ್ಟಪಡುತ್ತಿತ್ತು, ಮತ್ತು ಮುಚ್ಚುವ ಪರಿಸ್ಥಿತಿಯಲ್ಲಿತ್ತು. ನಿರ್ದೇಶಕ/ಬರಹಗಾರ ಸೂರಜ್ ಬರ್ಜಾತ್ಯಾರ ತಂದೆ ರಾಜ್‍ಕುಮಾರ್ ಬರ್ಜಾತ್ಯಾ ಮೆಯ್ನೆ ಪ್ಯಾರ್ ಕಿಯಾ ಚಿತ್ರದ ಕಥೆಯ ಸಲಹೆ ನೀಡಿದರು. ಮೆಯ್ನೆ ಪ್ಯಾರ್ ಕಿಯಾ ಚಿತ್ರದ ಚಿತ್ರಕಥೆಯನ್ನು ಬರೆಯಲು ಬರ್ಜಾತ್ಯಾ ಹತ್ತು ತಿಂಗಳು ಸಮರ್ಪಿಸಿದರು. ಮುಖ್ಯ ನಟನ ಪಾತ್ರಹಂಚಿಕೆಯು ಸಂಕೀರ್ಣವಾಯಿತು. ಮುಖ್ಯ ನಟಿಯ ಪಾತ್ರಕ್ಕೆ ಬರ್ಜಾತ್ಯಾ ಒಬ್ಬ ನಟಿಯ ಪರೀಕ್ಷೆ ನಡೆಸಿದರು. ಅವರು ಆ ಚಿತ್ರಾಭಿನಯ ಪರೀಕ್ಷೆಯಲ್ಲಿ ವಿಫಲವಾದಾಗ ಅವಳು ಮುಖ್ಯ ನಟನ ಪಾತ್ರಕ್ಕೆ ಒಬ್ಬ ನಟನನನ್ನು ಸೂಚಿಸಬಹುದೇ ಎಂದು ಬರ್ಜಾತ್ಯಾ ಕೇಳಿಕೊಂಡರು. ಅವಳು ಸಲ್ಮಾನ್ ಖಾನ್‍ನ ಹೆಸರನ್ನು ಸೂಚಿಸಿದರು. ಚಿತ್ರದ ಮೃದು ಸ್ವರೂಪದ ಕಾರಣ ಸಲ್ಮಾನ್ ಖಾನ್ ನಿಜವಾಗಿಯೂ ಆಸಕ್ತರಾಗಿರಲಿಲ್ಲ. ಅದನ್ನು ಮಾಡುವಂತೆ ಬರ್ಜಾತ್ಯಾ ಅಂತಿಮವಾಗಿ ಖಾನ್‍ರ ಮನವೊಲಿಸಿದರು. ಅಂದಿನಿಂದ ತಮ್ಮನ್ನು ತಾರೆಯನ್ನಾಗಿ ಮಾಡಿದ್ದಕ್ಕೆ ಖಾನ್ ಬರ್ಜಾತ್ಯಾರಿಗೆ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. ಬರ್ಜಾತ್ಯಾ ನಂತರ ಮುಖ್ಯ ನಟಿಯ ಪಾತ್ರವನ್ನು ಭಾಗ್ಯಶ್ರೀಗೆ ಹಂಚಿದರು. ನಕಾರಾತ್ಮಕ ಪಾತ್ರವನ್ನು ವಹಿಸಲು ಬರ್ಜಾತ್ಯಾ ಪರ್ವೀನ್‍ರನ್ನು ಇಂಗ್ಲಿಷ್ ರಂಗಭೂಮಿಯಿಂದ ಆಯ್ಕೆಮಾಡಿದರು. ಬರ್ಜಾತ್ಯಾ ಮುಂಬಯಿಯ ಫ಼ಿಲ್ಮ್ ಸಿಟಿಯಲ್ಲಿ ಬೃಹತ್ ರಂಗಸಜ್ಜುಗಳ ಏರ್ಪಾಟು ಮಾಡಿದ್ದರು. ಅಲ್ಲಿ ಚಿತ್ರೀಕರಣವು ೫ - ೬ ತಿಂಗಳ ಅವಧಿಯಲ್ಲಿ ನಿರಂತರವಾಗಿ ನಡೆಯಿತು. ಹೊರಾಂಗಣ ಚಿತ್ರೀಕರಣವು ಊಟಿಯಲ್ಲಿ ನಡೆಯಿತು. ತಯಾರಿಕೆಯಲ್ಲಿ ಭಾಗಿಯಾದ ಹೆಚ್ಚುವರಿ ತಂಡದವರಲ್ಲಿ ಮುಂದಿನವರು ಸೇರಿದ್ದಾರೆ: ಜಯ್ ಬೊರಾಡೆ—ನೃತ್ಯ ಸಂಯೋಜಕ, ಕಲೆ—ಬಿಜೋನ್ ದಾಸ್ ಗುಪ್ತಾ, ಸಾಹಸ—ಶಮೀಮ್ ಅಜ಼ೀಮ್ ಮತ್ತು ಸಂಕಲನಕಾರ—ಮುಖ್ತಾರ್ ಅಹಮದ್. ಚಿತ್ರದ ತಯಾರಿಕಾ ಬಂಡವಾಳವು ₹2 ಕೋಟಿಯಷ್ಟಿತ್ತು. ಈ ಚಿತ್ರಕ್ಕಾಗಿ ಸಲ್ಮಾನ್ ಖಾನ್‍ಗೆ ₹31,000 ಸಂಭಾವನೆ ನೀಡಲಾಗಿತ್ತು. ತಯಾರಿಕಾ ಬಂಡವಾಳದ ಜೊತೆಗೆ, ಧ್ವನಿವಾಹಿನಿಯ ರೇಡಿಯೊ ಪ್ರಚಾರಕ್ಕಾಗಿ ಹೆಚ್ಚುವರಿ ₹10 ಲಕ್ಷವನ್ನು ಖರ್ಚು ಮಾಡಲಾಯಿತು. == ಬಿಡುಗಡೆ == ಮೆಯ್ನೆ ಪ್ಯಾರ್ ಕಿಯಾ ಭಾರತದಾದ್ಯಂತ ೨೯ ಡಿಸೆಂಬರ್ ೧೯೮೯ರಂದು ಬಿಡುಗಡೆಯಾಯಿತು. ಮೆಯ್ನೆ ಪ್ಯಾರ್ ಕಿಯಾ ಚಿತ್ರವನ್ನು ಇಂಗ್ಲಿಷ್‍ನಲ್ಲಿ ವೆನ್ ಲವ್ ಕಾಲ್ಸ್ ಎಂದು ಡಬ್ ಮಾಡಲಾಯಿತು. ೧೨೫ ನಿಮಿಷಗಳ ಆವೃತ್ತಿಯು ಗಯಾನದ ಕೆರಿಬಿಯನ್ ಮಾರುಕಟ್ಟೆಯಲ್ಲಿ ಅತಿ ದೊಡ್ಡ ಯಶಸ್ಸಾಯಿತು ಮತ್ತು ಟ್ರಿನಿಡಾಡ್ ಮತ್ತು ಟೊಬೆಗೊದಲ್ಲಿಯೂ ಬಾಕ್ಸ್ ಆಫ಼ಿಸ್ ಯಶಸ್ಸಾಯಿತು. ತೆಲುಗಿನಲ್ಲಿ ಈ ಚಿತ್ರವನ್ನು ಪ್ರೇಮ ಪಾವುರಾಲು ಎಂದು ಡಬ್ ಮಾಡಲಾಯಿತು. ತಮಿಳಿನಲ್ಲಿ ಕಾದಳ್ ಒರು ಕವಿತಾಯ್ ಎಂದು ಮಲಯಾಳಂನಲ್ಲಿ ಇನ ಪ್ರಾವುಕಲ್ ಎಂದು ಡಬ್ ಮಾಡಲಾಯಿತು. ಸ್ಪ್ಯಾನಿಷ್ ಭಾಷೆಯಲ್ಲಿ ಕೂಡ ಈ ಚಿತ್ರವನ್ನು ಟೀ ಎಮೊ ಎಂದು ಡಬ್ ಮಾಡಲಾಗಿದೆ. === ಬಾಕ್ಸ್ ಆಫ಼ಿಸ್ === ಈ ಚಿತ್ರವು ೧೯೮೯ರಲ್ಲಿ ಅತಿ ಹೆಚ್ಚು ಹಣಗಳಿಸಿದ ಚಲನಚಿತ್ರವಾಗಿತ್ತು. ಸುಮಾರು ₹2 ಕೋಟಿ ಬಂಡವಾಳದಲ್ಲಿ ತಯಾರಾದ ಈ ಚಿತ್ರವು ೧೯೯೦ರ ವೇಳೆಗೆ ₹೨೦ ಕೋಟಿಗಿಂತ ಹೆಚ್ಚು ಲಾಭ ಗಳಿಸಿ ರಾಜ್‍ಶ್ರೀ ಮುಚ್ಚುವುದರಿಂದ ಉಳಿಯಿತು. ಮೆಯ್ನೆ ಪ್ಯಾರ್ ಕಿಯಾ ಅಪಾರವಾಗಿ ಜನಪ್ರಿಯವಾಯಿತು. ಇದು ಜಾಗತಿಕ ಮಹತ್ವದ ಚಿತ್ರ ಮತ್ತು ಮಾರ್ಗ ಪ್ರವರ್ತಕವೆಂದು ಪರಿಗಣಿತವಾಗಿದೆ. == ಧ್ವನಿವಾಹಿನಿ == ಧ್ವನಿವಾಹಿನಿ ಸಂಗ್ರಹ ಮತ್ತು ಹಿನ್ನೆಲೆ ಸಂಗೀತವನ್ನು ರಾಮ್‍ಲಕ್ಷ್ಮಣ್ ಸಂಯೋಜಿಸಿದರು. ಹಾಡುಗಳಿಗೆ ಸಾಹಿತ್ಯವನ್ನು ದೇವ್ ಕೋಹ್ಲಿ ಮತ್ತು ಅಸದ್ ಭೋಪಾಲಿ ಬರೆದರು. ಇದನ್ನು ಸಾ ರೆ ಗಾ ಮಾ ಹೆಸರಿನಲ್ಲಿ ನಿರ್ಮಿಸಲಾಯಿತು ಮತ್ತು ಲತಾ ಮಂಗೇಶ್ಕರ್, ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಗೂ ಶಾರದಾ ಸಿನ್ಹಾ ರಂತಹ ಪ್ರಸಿದ್ಧ ಗಾಯಕರನ್ನು ಹೊಂದಿತ್ತು. ಧ್ವನಿವಾಹಿನಿಯಲ್ಲಿ ೧೧ ಹಾಡುಗಳಿವೆ. ಬಿಡುಗಡೆ ಬಳಿಕ ಧ್ವನಿವಾಹಿನಿಯು ಬಹಳ ಯಶಸ್ವಿಯಾಯಿತು ಮತ್ತು ಆ ದಶಕದಲ್ಲಿ ಅತಿ ಹೆಚ್ಚು ಮಾರಾಟವಾದ ಬಾಲಿವುಡ್ ಧ್ವನಿವಾಹಿನಿ ಎನಿಸಿಕೊಂಡಿತು. ಚಿತ್ರದ ಧ್ವನಿವಾಹಿನಿ ಸಂಗ್ರಹದ ೧೦ ದಶಲಕ್ಷಕ್ಕಿಂತ ಹೆಚ್ಚು ಘಟಕಗಳು ಮಾರಾಟವಾದವು. == ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು == ೩೫ನೇ ಫಿಲ್ಮ್‌ಫೇರ್ ಪ್ರಶಸ್ತಿಗಳು ಅತ್ಯುತ್ತಮ ಚಲನಚಿತ್ರ - ರಾಜ್‍ಶ್ರೀ ಪ್ರೊಡಕ್ಷನ್ಸ್ - ಗೆಲುವು ಅತ್ಯುತ್ತಮ ಸಂಗೀತ ನಿರ್ದೇಶಕ - ರಾಮ್‍ಲಕ್ಷ್ಮಣ್ - ಗೆಲುವು ಅತ್ಯುತ್ತಮ ಗೀತಸಾಹಿತಿ - ಅಸದ್ ಭೋಪಾಲಿ ("ದಿಲ್ ದೀವಾನಾ" ಹಾಡಿಗಾಗಿ) - ಗೆಲುವು ಅತ್ಯುತ್ತಮ ಹಿನ್ನೆಲೆ ಗಾಯಕ - ಎಸ್. ಪಿ. ಬಾಲಸುಬ್ರಮಣ್ಯಂ ("ದಿಲ್ ದೀವಾನಾ" ಹಾಡಿಗಾಗಿ) - ಗೆಲುವು ಅತ್ಯುತ್ತಮ ಪುರುಷ ಪ್ರಥಮ ಪ್ರವೇಶ - ಸಲ್ಮಾನ್ ಖಾನ್ - ಗೆಲುವು ಅತ್ಯುತ್ತಮ ಮಹಿಳಾ ಪ್ರಥಮ ಪ್ರವೇಶ - ಭಾಗ್ಯಶ್ರೀ - ಗೆಲುವು ಅತ್ಯುತ್ತಮ ನಿರ್ದೇಶಕ - ಸೂರಜ್ ಬರ್ಜಾತ್ಯಾ - ನಾಮನಿರ್ದೇಶನ ಅತ್ಯುತ್ತಮ ನಟ - ಸಲ್ಮಾನ್ ಖಾನ್ - ನಾಮನಿರ್ದೇಶನ ಅತ್ಯುತ್ತಮ ನಟಿ - ಭಾಗ್ಯಶ್ರಿ - ನಾಮನಿರ್ದೇಶನ ಅತ್ಯುತ್ತಮ ಪೋಷಕ ನಟಿ - ರೀಮಾ ಲಾಗೂ - ನಾಮನಿರ್ದೇಶನ ಹಾಸ್ಯಪಾತ್ರದಲ್ಲಿ ಅತ್ಯುತ್ತಮ ಅಭಿನಯ - ಲಕ್ಷ್ಮೀಕಾಂತ್ ಬೇರ್ಡೆ - ನಾಮನಿರ್ದೇಶನ ಅತ್ಯುತ್ತಮ ಗೀತಸಾಹಿತಿ - ದೇವ್ ಕೋಹ್ಲಿ ("ಆತೆ ಜಾತೆ ಹ್ಞಸತೆ ಗಾತೆ" ಹಾಡಿಗಾಗಿ) - ನಾಮನಿರ್ದೇಶನ == ಉಲ್ಲೇಖಗಳು == == ಹೊರಗಿನ ಕೊಂಡಿಗಳು == ಮೆಯ್ನೆ ಪ್ಯಾರ್ ಕಿಯಾ @ ಐ ಎಮ್ ಡಿ ಬಿ